Narayanapura Right Bank Canal Breaches Crops In Over Acres Damaged
Narayanapura Right Bank Canal Breaches, Crops In Over 50 Acres Damaged
ರಾಯಚೂರು: ಇಲ್ಲಿನ ದೇವದುರ್ಗದ ರಾಮದುರ್ಗ ಬಳಿ ನಾರಾಯಣಪುರ ಬಲದಂಡೆ ಕಾಲುವೆ ಒಡೆದಿದ್ದು ಅಪಾರ ಪ್ರಮಾಣ ನೀರು ಗದ್ದೆಗಳಿಗೆ ನುಗ್ಗಿದೆ.
17ನೇ ವಿತರಣಾ ಕಾಲುವೆ ಒಡೆದು ಆಲ್ದರ್ತಿ ಗ್ರಾಮದ ರೈತರ 40 ಎಕರೆಗೂ ಹೆಚ್ಚು ಪ್ರಮಾಣದ ಬೆಳೆಹಾನಿಯಾಗಿದೆ. ರೈತ ಹನಮಂತ ಎಂಬವರ ಗದ್ದೆ ಪಕ್ಕದಲ್ಲೇ ಕಾಲುವೆ ಒಡೆದಿದ್ದು ಭತ್ತ ಬೆಳೆ ಸಂಪೂರ್ಣ ಹಾನಿಯಾಗಿದೆ. ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.
ಕಾಲುವೆ ದುರಸ್ಥಿ ಹಾಗೂ ಅಸಮರ್ಪಕ ನಿರ್ವಹಣೆಯಿಂದ ಘಟನೆ ನಡೆದಿದ್ದು ಕಾಲುವೆಯಿಂದ ಅತ್ಯಂತ ರಭಸವಾಗಿ ಗದ್ದೆಗಳಿಗೆ ನೀರು ಹರಿಯುತ್ತಿದೆ. ಇತ್ತೀಚೆಗಷ್ಟೇ 1 ಕೋಟಿ 20 ಲಕ್ಷ ವೆಚ್ಚದಲ್ಲಿ ಎನ್ ಆರ್ ಬಿಸಿ ವಿತರಣಾ ಕಾಲುವೆ ದುರಸ್ಥಿ ಕಾರ್ಯ ನಡೆದಿತ್ತು. ಆದ್ರೆ ಕಾಮಗಾರಿ ಕಳಪೆಯಾದ ಪರಿಣಾಮ ಕಾಲುವೆ ಒಡೆದಿರುವುದು ಈಗ ಸ್ಪಷ್ಟವಾಗಿದೆ.
ಕಾಲುವೆ ಒಡೆದಿರುವುದರಿಂದ ನೀರು ನುಗ್ಗಿ ಬೆಳೆ ಹಾನಿಯಾಗಿರುವುದು ಒಂದೆಡೆಯಾದ್ರೆ ಈಗ ದುರಸ್ಥಿ ಕಾರ್ಯಕ್ಕಾಗಿ ನೀರು ನಿಲ್ಲಿಸುವುದರಿಂದ ಕೆಳಭಾಗದ ರೈತರ ಗದ್ದೆಗೆ ನೀರಿಲ್ಲದಂತಾಗಿ ಬೆಳೆ ಒಣಗುವ ಆತಂಕವೂ ಎದುರಾಗಿದೆ. ಎನ್ ಆರ್ ಬಿಸಿ ಅಧಿಕಾರಿಗಳು ಈಗ ಸ್ಥಳಕ್ಕೆ ದೌಡಾಯಿಸಿದ್ದು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ರೈತರಿಗೆ ನೀರಿಲ್ಲ ನೀರಿಲ್ಲ ಅಂತ ಪ್ರತಿಭಟನೆ ಮಾಡಿ ನೀರು ತಂದ್ವಿ. ಆದ್ರೆ ಇದೀಗ ಕಳಪೆ ಕೆಲಸ ಮಾಡಿ ಕಾಲುವೆ ಒಡೆದು ನೀರು ಪೋಲಾಗುತ್ತಿದೆ ಅಲ್ಲದೇ ನಾವು ಬೆಳೆದ ಬೆಳೆ ನೀರು ಪಾಲಾಗಿದೆ. ಈ ಕಾಲುವೆ ದುರಸ್ಥಿ ಆಗಬೇಕಂದ್ರೆ ಸರಿಸುಮಾರು 1 ವಾರ ಬೇಕು. ಈ ನೀರು ಹೋಗಿ ಗದ್ದೆ ಹಾಳಾಗಿದೆ ಅಂತ ರೈತರಿಬ್ಬರು ವಿಡಿಯೋ ಮಾಡಿ ಸಂಬಂಧಪಟ್ಟವರ ವಿರುದ್ಧ ಕಿಡಿಕಾರಿದ್ದಾರೆ.